ಭಾನುವಾರ, ಫೆಬ್ರವರಿ 20, 2011

ಕರ್ನಲ್ ಬೈಲೀ ಡನ್ಜನ್ ಹಾಗು ಪ್ರವಾಸಿಗಳು ಅವರಿಗೆ ತಕ್ಕ ಗೈಡುಗಳು!!!


ಬನ್ನಿ  ಇಲ್ಲೊಂದು ಜೈಲಿದೆ ಅಲ್ಲಿಗೆ ಭೇಟಿ ಕೊಡೋಣ.ರಂಗನಾಥ ಸ್ವಾಮೀ ದೇವಾಲಯದ ಸ್ವಲ್ಪ ಸಮೀಪ  ಉತ್ತರಕ್ಕೆ ಈ ಜೈಲು ಅಥವಾ  ಡನ್ಜನ್  ಕಾಣಲು ಸಿಗುತ್ತದೆ. ಹೊರಗಡೆ ಇಂದ ನೋಡಿದರೆ ಒಂದು ಕಾವಲು ಬುರುಜಿನಂತೆ ಕಾಣುವ ಇದನ್ನು  "ಸುಲ್ತಾನ್ ಬತೇರಿ " ಎಂದು ಕರೆಯಲಾಗುತ್ತಿತ್ತೆಂದು ಕೆಲವು ಗೆಜೆಟ್ ದಾಖಲೆಗಳು ತಿಳಿಸುತ್ತವೆ.ಈ ಪ್ರದೇಶದಲ್ಲಿ ಅತಿಯಾದ ಬಿಗಿ ಕಾವಲು ಪಡೆಗೆ ಸೈನಿಕರನ್ನು ನಿಯೋಜಿಸಲಾಗುತ್ತಿತ್ತೆಂದು ತಿಳಿದುಬರುತ್ತದೆ. ಕಾವಲು ಬತೇರಿ ಕೆಳಗೆ ನೆಲಮಾಳಿಗೆ ಯಲ್ಲಿ ಜೈಲು ನಿರ್ಮಾಣವಾಗಿದ್ದು  ಆಂಗ್ಲ  ಅಧಿಕಾರಿಗಳನ್ನು ಇಲ್ಲಿ ಸೆರೆಯಲ್ಲಿ ಇಟ್ಟಿದ್ದರೆಂದು ತಿಳಿದುಬರುತ್ತದೆ.ಹಾಗೆ ಸೆರೆಯಲ್ಲಿಟ್ಟ ಅಧಿಕಾರಿಗಳಲ್ಲಿ "ಕರ್ನಲ್ ಬೈಲಿ" ಸಹ ಸೆರೆಯಲ್ಲಿದ್ದನೆಂದು ,ತಿಳಿಸಲಾಗಿದೆ . ನಂತರ ಇವನು ಶ್ರೀ ರಂಗ ಪಟ್ಟಣ ಅಂತಿಮ ಯುದ್ದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ತಿಳಿದುಬರುತ್ತದೆ. ಹಾಗಾಗಿ ಈ ಜೈಲಿಗೆ ಕರ್ನಲ್ ಬೈಲೀ ದಂಜನ್ಎಂದು ಕರೆಯಲಾಗಿದೆ  ಎಂದು ತಿಳಿಸುತ್ತಾರೆ.ಇದರ ಬಗ್ಗೆ ಸರಿಯಾದ ಮಾಹಿತಿ ಹೊರಬರಬೇಕಾಗಿದೆ.ಏನೇ ಇರಲಿ ಹಾಲಿ ಇದನ್ನು ಕರ್ನಲ್ ಬೈಲೀ ದಂಜನ್ ಅಂತಾನೆ ಕರೀತಾರೆ.                      ಈ ನೆಲಮಾಳಿಗೆಯ ಜೈಲು 100x 40 ಅಡಿ ಇದ್ದು  ಚಪ್ಪಟೆ ಆಕಾರದ    ಇಟ್ಟಿಗೆ ಹಾಗು ಗಚ್ಚುಗಾರೆಯಿಂದ ನಿರ್ಮಿತಗೊಂಡಿದೆ. ಕೈಧಿಗಳನ್ನು ಇಲ್ಲಿ ಕಲ್ಲಿನ ಗೂಟಗಳಿಗೆ ಕಬ್ಬಿಣದ ಸರಪಣಿಹಾಕಿ   ಕಟ್ಟಿಹಾಕುತ್ತಿದ್ದರೆಂದು ತಿಳಿದುಬರುತ್ತದೆ. ಇದರ ಪ್ರಾತ್ಯಕ್ಷಿಕೆಯನ್ನು ನನ್ನ ಸ್ನೇಹಿತ ಸತ್ಯ ರವರು ತೋರಿದ್ದು ಹೀಗೆ . ಅಬೇದ್ಯವಾದ ಈ ಜೈಲಿನಲ್ಲಿ ಖೈದಿ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಬನ್ನಿ ಇಲ್ಲೊಂದು  ವಿಶೇಷವಿದೆ. ಜಲಿನ ಮಧ್ಯಭಾಗದಲ್ಲಿ  ಒಂದು ದೊಡ್ಡ  ಪಿರಂಗಿ  ಬಿದ್ದಿದೆ. ಇಲ್ಲಿಗೆ ಬರುವ ಪ್ರವಾಸಿಗಳಿಗೆ ಕೆಲವು ಕೆಲವು ಗೈಡುಗಳು ಹೇಳುತ್ತಿದ್ದ ವಿಚಾರ ಅಚ್ಚರಿಮೂಡಿಸುತ್ತದೆ. ಆಗತಾನೆ ಬಂದ  ಪ್ರವಾಸಿಗಳ ಗುಂಪಿಗೆ ಒಬ್ಬ ಗೈಡ್ ಹೇಳುತ್ತಿದ್ದ " ನೋಡಿ ಸಾರ್ ಈ ಪಿರಂಗಿ ಇದ್ಯಲ್ಲಾ ಇದನ್ನು ಬ್ರಿಟೀಷರು  ಶ್ರೀ ರಂಗಪಟ್ಟಣ  ಯುದ್ದ ಮಾಡುವಾಗ ಕರಿ ಘಟ್ಟ ಬೆಟ್ಟದಿಂದ ಹಾರಿಸಿದರು ಅಲ್ಲಿಂದ ಹಾರಿಕೊಂಡು ಬಂದ ಈ ಪಿರಂಗಿ ಇಲ್ಲಿಗೆ  ಬಂದು ಬಿದ್ದಿದೆ."ಎಂದು ತನ್ನ ಲಾಜಿಕ್ ಹೇಳಿದ್ದ.[ಪಾಪ ಪಿರಂಗಿ ಗುಂಡು ಹಾರುತ್ತದೆಯೇ ಹೊರತಾಗಿ ಪಿರಂಗಿ ಹಾರುತ್ತದೆಂಬ ಅವನ ಮಾತನ್ನು  ಸರಿಪಡಿಸುವವರು ಯಾರೂ ಇಲ್ಲ.] ಇದನ್ನು ಯೋಚಿಸದ  ಪ್ರವಾಸಿಗರು  ಅವನು ಹೇಳಿದ ಇತಿಹಾಸ ಕೇಳಿಕೊಂಡು ಅವನಿಗೆ ತಮ್ಮ ಕಾಣಿಕೆ ನೀಡಿದ್ದರು.          ಆದರೆ ವಾಸ್ತವವಾಗಿ ಇದು ಅಂತಿಮ ಮೈಸೂರು ಯುದ್ದದ ಸಮಯದಲ್ಲಿ  ಬುರುಜಿನ ಮೇಲಿದ್ದ ಈ ಪಿರಂಗಿ  ಗುಂಡು ಹಾರಿಸಿದ ರಭಸಕ್ಕೆ  ಹಿಂದೆ ಸರಿದು ಆಯ  ತಪ್ಪಿ ಚಾವಣಿಯನ್ನು ತೂತುಮಾಡಿಕೊಂಡು ಬಂದು  ಕೆಳಗೆ ಬಿದ್ದಿದೆ ಎನ್ನುವುದು ನಿಜ ಸಂಗತಿ. ಪ್ರವಾಸದ ಒತ್ತಡದಲ್ಲಿ ಪ್ರವಾಸಿಗಳು  ಗೈಡುಗಳು ಹೇಳಿದ ಮಾಹಿತಿಯನ್ನು ಪರಿಶೀಲಿಸದೆ  ಹೇಳಿದ್ದನ್ನು ಒಪ್ಪಿಕೊಂಡು  ಹಣ ಕೊಟ್ಟು ಹೊರಡುತ್ತಾರೆ. ನಿಜವಾದ ಇತಿಹಾಸ ತಿಳಿದು ಮಾಹಿತಿ ನೀಡುವ ಗೈಡುಗಳ ಕೊರತೆ ಇರುವುದು  , ಗೈದುಗಳು ಇದ್ದರೂ ಅವರಿಗೆ ಇತಿಹಾಸದ  ಅರಿವಿಲ್ಲದೆ ತಪ್ಪು ತಿಳುವಳಿಕೆ ಮೂಡಿ  ಇಂತಹ ಅವಗಡಗಳಿಗೆ ಕಾರಣವಾಗಿದ್ದು. ಈ ಕೊರತೆ ನೀಗಿಸಬೇಕಾಗಿದೆ.  ನೀವು ಮುಂದೊಮ್ಮೆ ಇಲ್ಲಿಗೆ ಬಂದಾಗ ಈ ಮಾಹಿತಿಯನ್ನು ಗೈಡುಗಳಲ್ಲಿ ಪರೀಕ್ಷಿಸಿನೋಡಿ. ಮುಂದಿನ ಸಂಚಿಕೆಯಲ್ಲಿ  ಮತ್ತೊಂದು ಸ್ಮಾರಕದ ಬಗ್ಗೆ ಮಾಹಿತಿ ನೀಡುವೆ  ವಂದನೆಗಳು.

2 ಕಾಮೆಂಟ್‌ಗಳು:

ಮನಸಿನಮನೆಯವನು ಹೇಳಿದರು...

ಅವರಿಗೆ ತಕ್ಕ ಗೈಡುಗಳು ಇಲ್ಲದಿರುವುದು ಬೇಸರದ ಸಂಗತಿ...

ಸೀತಾರಾಮ. ಕೆ. / SITARAM.K ಹೇಳಿದರು...

ಗೈಡುಗಳು ತಮ್ಮ ಬ್ಲಾಗ್ ಓದಬೇಕು.