ಭಾನುವಾರ, ಜುಲೈ 8, 2012

ಮೂಡಲ ದಿಕ್ಕಿನಿಂದ ಬಡಗಲ ದಿಕ್ಕಿಗೆ ತಿರುಗಿದ ಹನುಮಂತ, ಸನಿಹದಲ್ಲೇ ಇದ್ದಾನೆ ಜ್ಯೋತಿರ್ ಮಹೇಶ್ವರ !!!!!


ಮೂಡಲ ಬಾಗಿಲ ಆಂಜನೇಯ ಸ್ವಾಮೀ ದೇವಾಲಯ.

ಇತಿಹಾಸವೇ ಹಾಗೆ ವಿಚಿತ್ರ ತಿರುವಿನ ಘಟನೆಗಳ ಸರಮಾಲೆ, ಅಲ್ಲಿ ನಮ್ಮ ತರ್ಕ ,ಕುತರ್ಕ, ಇವುಗಳಿಗೆ ಅವಕಾಶವಿಲ್ಲ.ನಾವಿಂದು ಸ್ವಾತಂತ್ರ್ಯದ ಸಮಾಜದಲ್ಲಿ ಅಂದು ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂದು ಏನೇ ಪ್ರಲಾಪಿಸಿದರೂ ಆಗಿಹೋಗಿರುವ ಐತಿಹಾಸಿಕ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲಾ.ಇತಿಹಾಸವನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ನಾವು ಅಂದಿನವರಾಗಿ ಇದ್ದು ಅರ್ಥ ಮಾಡಿಕೊಳ್ಳ ಬೇಕು , ಆದರೆ ನಾವು ನಮ್ಮ ಮೂಗಿನ ನೇರಕ್ಕೆ ಅದನ್ನು ವಿಶ್ಲೇಷಣೆ ಮಾಡಿ ಇತಿಹಾಸವನ್ನು ಗೊಂದಲದ ಗೂಡಾಗಿಸಿ ಘಟನೆಗಳನ್ನು ಮರೆ ಮಾಚುತ್ತಿದ್ದೇವೆ.ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಎರಡು ಹಳೆ ದೇವಾಲಯಗಳನ್ನು ಪರಿಚಯ ಮಾಡಿಕೊಡುತ್ತೇನೆ.
ಮೂಡಲದಿಂದ ಬದಗಳಿಗೆ ತಿರುಗಿದ ಹನುಮ

ಜುಮ್ಮಾ ಮಸೀದಿ ಹತ್ತಿರದಲ್ಲಿ ಹಾದು ಹೋಗುವ ಪೇಟೆ ಬೀದಿಯಲ್ಲಿ ಊರಕದೆಗೆ ತೆರಳುವಾಗ ನಿಮಗೆ  ಬೀದಿಯ ಎಡ ಭಾಗಕ್ಕೆ ಮೂಡಲ ಬಾಗಿಲ ಆಂಜನೇಯ ದೇಗುಲ ಸಿಗುತ್ತದೆ. ಈ ದೇವಾಲಯವು ಮೊದಲು ಶ್ರೀ ರಂಗಪಟ್ಟಣ  ಕೋಟೆಯ  ಪೂರ್ವದ ಬಾಗಿಲಿಗೆ ಅಭಿಮುಖವಾಗಿ  ಇತ್ತೆಂದೂ ನಂತರ ಇದನ್ನು ಸ್ಥಳಾಂತರಿಸಿ ಇಲ್ಲಿ ಉತ್ತರಾಭಿಮುಖವಾಗಿ  ಪ್ರತಿಷ್ಟಾಪಿಸಲಾಯಿತೆಂದು ಹೇಳುತ್ತಾರೆ.ಹಲವು ಕಾರಣಗಳಿಂದ ಮಹಾ ಬಲವಂತ ನಾದ ಹನುಮನು  ಇಲ್ಲಿ ಮೂಡಲ ದಿಕ್ಕಿಗೆ   ಬದಲು ಬಡಗಲ ದಿಕ್ಕಿಗೆ  ಮುಖ ಮಾಡಿ ಇತಿಹಾಸವನ್ನು ಮೆಲುಕು ಹಾಕುತ್ತಾ ನಿಂತಿದ್ದಾನೆ , ಇಲ್ಲಿ ತನ್ನ ಸೌಹಾರ್ಧತೆಯನ್ನು ಮೆರೆದಿದ್ದಾನೆ.ದೇವಾಲಯದ ಒಳಗೆ ಸುಂದರ  ಹನುಮ ಮೂರ್ತಿ ಇದ್ದು ಪ್ರವಾಸಿಗಳು ಇದನ್ನು ದರ್ಶನ ಮಾಡಲು ಉತ್ತಮವಾಗಿದೆ.

ಜ್ಯೋತಿರ್ ಮಹೇಶ್ವರ ದೇವಾಲಯದ ಒಂದು ನೋಟ

ಮೂಡಲ ಬಾಗಿಲ ಹನುಮನ ದೇವಾಲಯದ ಸಾಲಿನಲ್ಲಿ ಕೆಲವೇ ಹೆಜ್ಜೆಗಳ ದೂರದಲ್ಲಿ ಮತ್ತೊಂದು ದೇವಾಲಯವಿದ್ದು ಅದು ವಿಶೇಷ ದೇವಾಲಯವೆಂದು ಹೇಳಲಾಗುತ್ತದೆ. ಯಾವ   ಊರಿನಲ್ಲಿ ಒಂದು ಲಕ್ಷ ದೀಪ ಬೆಳಗುತ್ತಿತ್ತೋ ಆ ಊರಿನಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡುತ್ತಿದ್ದರೆಂದು ಹೇಳುತ್ತಾರೆ.ಅಂತಹ ಒಂದು ದೇವಾಲಯವೇ ಇಲ್ಲಿರುವ ಜ್ಯೋತಿರ್ ಮಹೇಶ್ವರಸ್ವಾಮೀ ದೇವಾಲಯ.ಇದರ ನಿರ್ಮಾಣದ ಬಗ್ಗೆ , ಇದನ್ನು ಯಾವ ಕಾಲದಲ್ಲಿ ನಿರ್ಮಿಸಲಾಯಿತೆಂಬ ಬಗ್ಗೆ ಇದರ ಇತಿಹಾಸದಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ."ಕಾಂಜೀಪುರಂ   ಹಯವದನ ರಾವ್ " ರವರು ಬರೆದಿರುವ ಮೈಸೂರು ಇತಿಹಾಸದ ದಾಖಲೆಗಳಲ್ಲಾಗಲಿ , ಬಿ. ಎಲ್ . ರೈಸ್ ರವರ ಗೆಜೆಟ್ ನಲ್ಲಿಯಾಗಲಿ ಈ ದೇವಾಲಯದ ಬಗ್ಗೆ  ಮಾಹಿತಿ ಇರುವುದಿಲ್ಲ.ಹಾಗಾಗಿ ಈ ದೇವಸ್ಥಾನದ ಇತಿಹಾಸ ಅಡಗಿಯೇ ಕುಳಿತಿದೆ.
ದೇವಾಲಯದ ಹಿಂಭಾಗದ ನೋಟ

ಆದರೆ ಕೆಲವರು ಇದು ದಳವಾಯಿಗಳ ಕಾಲದಲ್ಲಿ ನಿರ್ಮಾಣವಾಯಿತೆಂದು ಹೇಳುತ್ತಾರೆ.ಯಾವುದಕ್ಕೂ ದಾಖಲೆಗಳ ಪುರಾವೆ ಇಲ್ಲಾ , ಆದರೆ ಈ ದೇವಾಲಯ ಗಮನಿಸಿದಾಗ ಈ ದೇವಾಲಯ ಒಂದು ಶತಮಾನಕ್ಕೂ ಮೀರಿ ಹಳೆಯದೆಂದು ಕಂಡು ಬರುತ್ತದೆ.ಇದನ್ನು ಪುಷ್ತೀ ಕರಿಸಲು ಆ ದೇವಾಲಯ ನಿರ್ಮಿಸಲು ಬಳಸಿರುವ ಚಕ್ಕೆಯಾಕಾರದ ಇಟ್ಟಿಗೆ ಗಳಿಂದ ತಿಳಿಯಬಹುದಾಗಿದೆ. ಬನ್ನಿ ದೇವಾಲಯವನ್ನು ನೋಡೋಣ. ಮೊದಲಿಗೆ ಈ ಆವರಣದೊಳಗೆ ಕಾಲಿಟ್ಟೊಡನೆ ನಿಮ್ಮನ್ನು ಒಂದು ಹಳೆಯ ಕಾಲದ ವಾಸ್ತುವಿನೊಂದಿಗೆ ಹನ್ನೆರಡು  ಕಂಬಗಳನ್ನು ಹೊಂದಿದ ಶಿಥಿಲಗೊಂಡ ಗೋಪುರಗಳ ಈ ದೇವಾಲಯ ಕಂಡು ಬರುತ್ತದೆ.
ಶತಮಾನ ಮೀರಿದ ದೇವಾಲಯದ ಒಂದು ಹಿನ್ನೋಟ
ದೇವಾಲದ  ಚಾವಣಿಗೆ ಹೋಗಲು ಇರುವ ಬಾಗಿಲು.
ಚಿತ್ತಾರದ ಗೋಪುರ 
ಮುಸುಕು ಹಿಡಿದ ಚಿತ್ತಾರಗಳು.

ದೇವಾಲಯದ ಸುತ್ತ ಒಂದು ಸುತ್ತು ಬಂದರೆ ನಿಮಗೆ ಈ ದೇವಾಲಯ ಶತಮಾನಕ್ಕೂ ಮೀರಿದ್ದೆಂದು ಪುರಾವೆಗಳು ಸಿಗುತ್ತಾ ಹೋಗುತ್ತವೆ. ಸರಿಯಾದ ನಿರ್ವಹಣೆ ಇಲ್ಲದೆ  ದೇವಾಲಯದ ಕಟ್ಟಡದೊಳಗೆ ಮರ , ಗಿಡಗಳು ಬೆಳೆದುಕೊಂಡು ಗೋಡೆಗಳು ಸೀಳುಬಿಡುತ್ತಿರುವುದನ್ನು ನೋಡ ಬಹುದು.  ಮುಂದೆ ಸಾಗಿದರೆ ಒಂದು ಬಾಗಿಲು ಸಿಕ್ಕುತ್ತದೆ ಅದರಲ್ಲಿ ಪ್ರವೇಶಿಸಿ ಮೆಟ್ಟಿಲು ಏರಿ ದೇವಾಲಯದ ಚಾವಣಿ ಮೇಲೆ ಬಂದರೆ ಅಲ್ಲಿರುವ ಗೋಪುರಗಳಲ್ಲಿ  ಹಲವು ಬಗೆಯ ಚಿತ್ತಾರಗಳನ್ನು ನೀವು ಗಮನಿಸ ಬಹುದು.ಆದರೆ ನಿರ್ವಹಣೆ ಕೊರತೆಯಿಂದ ಗೋಪುರದಲ್ಲಿನ ಸುಂದರ ಚಿತ್ತಾರಗಳು ಹವಾಮಾನ ದ ವೈಪರೀತ್ಯಕ್ಕೆ ಸಿಲುಕಿ  ಕಪ್ಪಾಗಿ ಶಿಥಿಲವಾಗುತ್ತಿವೆ.
ಜ್ಯೋತಿರ್ಮಹೇಶ್ವರ  ಲಿಂಗ
ಗರ್ಭಗುಡಿಯ ದರ್ಶನ
ಸುಂದರ ಪ್ರಭಾವಳಿ ಧರಿಸಿದ ಗಣಪ

ಹಾಗೆ ಸಾಗಿ ದೇವಾಲಯದ ಒಳಗೆ ಬಂದರೆ ನಿಮಗೆ ಜ್ಯೋತಿರ್ ಮಹೇಶ್ವರನ ದರ್ಶನ ಆಗುತ್ತದೆ.ಜನಜಂಗುಳಿ ಇಲ್ಲದ ನಿಷ್ಯಬ್ದವಾದ ಈ ಆಲಯದಲ್ಲಿ "ಜ್ಯೋತಿರ್ ಮಹೇಶ್ವರ"ಸ್ವಾಮೀ  ಬರುವ ಭಕ್ತರಿಗೆ ತನ್ನ ಗುಟ್ಟು ಬಿಟ್ಟುಕೊಡದೆ ದರ್ಶನ ನೀಡಿ ಹರಸುತ್ತಿದ್ದಾನೆ.ಹಾಗೆ ಒಮ್ಮೆ ಕಣ್ಣು ಹಾಯಿಸಿದರೆ ನಿಮಗೆ ಮತ್ತಷ್ಟು ವಿವರಗಳು ದೊರೆಯುತ್ತವೆ. ಸುಂದರ ಪ್ರಭಾವಳಿಗಳ ಅಲಂಕಾರ ಹೊಂದಿ ನಿಂತಿರುವ ಹಲವು ಮೂರ್ತಿಗಳನ್ನು ನೀವು ಗಮನಿಸ ಬಹುದು. ದೇವಾಲಯದ ಮತ್ತೊಂದು ಸನ್ನಿಧಿಯಲ್ಲಿ ನೆಲಸಿಹ ಪಾರ್ವತಿ ಅಮ್ಮನವರ ಸನ್ನಿಧಿಗೆ ಹೋಗೋಣ ಬನ್ನಿ  ಈ ಸನ್ನಿಧಿ ಬಗ್ಗೆ ಇತ್ತೀಚಿಗೆ ಹಲವು ಟಿ.ವಿ.ಚಾನಲ್ ಗಳಲ್ಲಿ ಕಾರ್ಯಕ್ರಮ ಬಂದು ಈ ದೇವಿಯನ್ನು  "ಕ್ಷಣ ಅಂಬಿಕಾ" ಎಂದು ಕರೆಯಲಾಗುತ್ತಿದೆ .
ಕ್ಷಣ ಅಂಬಿಕಾ ಸನ್ನಿಧಿ
ಮಂಗಳಾರತಿ ದರ್ಶನ
ಆದಿ ಶಂಕರಾಚಾರ್ಯರ ಮೂರ್ತಿ
ವೇದ ಮಾತೆ ಗಾಯತ್ರಿದೇವಿ
ಈ ಸನ್ನಿಧಿಯಲ್ಲಿ ಶ್ರೀ ಚಕ್ರ ವಿದ್ದು ಬೇಡಿದವರ ಅಭೀಷ್ಟ ಕ್ಷಣದಲ್ಲಿ ಈಡೆರುತ್ತದೆಂದು ಹೇಳುತ್ತಾರೆ. ಇದರ ನಂತರ ಬರುವ ಭಕ್ತರ ಸಮೂಹ ಹೆಚ್ಚಾಗಿದೆ .ದೇವಿ ಸನ್ನಿಧಿಯ ಸನಿಹದಲ್ಲಿ ನಿಮಗೆ ಆದಿ ಶಂಕರಾಚಾರ್ಯರ ಮೂರ್ತಿ  ದರ್ಶನ ಆಗುತ್ತದೆ . ದೇವಾಲಯದ ಹೊರಗೆ ಬಂದರೆ ವೇದ ಮಾತೆ ಗಾಯತ್ರಿದೇವಿ ಸರಿಯಾದ ನಿರ್ವಣೆ ಇಲ್ಲದೆ ಕುಳಿತ್ತಿದ್ದಾಳೆ.  ಈ ದೇವಾಲಯವು  ಗುಟ್ಟಾದ  ಇತಿಹಾಸವನ್ನು ತನ್ನ ಒಡಲಿನಲ್ಲೇ ಇಟ್ಟುಕೊಂಡು ನಿರ್ವಹಣೆ ಇಲ್ಲದೆ ಸೊರಗಿದೆ. ಒಮ್ಮೆ ನೀವು ಹೋಗಿ ಬನ್ನಿ ಇಲ್ಲಿಗೆ .

8 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲಣ್ಣ...

ಮೊದಲಿಗೆ ನಿಮ್ಮ ಇತಿಹಾಸದ ಆಸಕ್ತಿಗೆ ಜೈ ಹೋ !

ಓದುತ್ತಾ ಓದುತ್ತಾ ತುಂಬಾ ಬೇಸರವಾಯಿತು..
ನಮ್ಮ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾದಂಥಹ ದೇವಾಲಯಗಳನ್ನು ನಾವು ಸರಿಯಾಗಿ ನೋಡಿಕೊಳ್ಳುತ್ತಿಲ್ಲ...

ಫೋಟೊಗಳು ಕುತೂಹಲಾವನ್ನು ಜಾಸ್ತಿ ಮಾಡಿದವು...
ಮುಂದಿನ ಬಾರಿ ಹೋದಾಗ ಇವನ್ನು ನೋಡಿ ಬರಬೇಕು...

ಉಪಯುಕ್ತ ಮಾಹಿತಿಗಾಗಿ ತುಂಬಾ ತುಂಬಾ ಧನ್ಯವಾದಗಳು...

swapnageleya ಹೇಳಿದರು...

ತು೦ಬಾ ಆಸಕ್ತಿಕರವಾಗಿ ವಿಷಯವನ್ನ ಪ್ರಸ್ತುತಪಡಿಸಿದ್ದೀರ.ನಿಮ್ಮ ಸಂಶೋಧನಾ ಸಾಮರ್ಥ್ಯಕ್ಕೆ ಶರಣು..

www.ravindratalkies.blogspot.in

Badarinath Palavalli ಹೇಳಿದರು...

ಇತಿಹಾಸವನ್ನು ಮೊದಲಿನಿಂದಲೂ ತಮ್ಮ ಆಳುವರಸರ ಮರ್ಜಿಗೆ ಅನುಗುಣವಾಗಿ ಬರೆಯುತ್ತಲೇ ಬಂದರು. ಇಂದು ನಾವು ಓದುವ ಇತಿಹಾಸ ಪಠ್ಯವೆಲ್ಲವೂ ಪರಿಪೂರ್ಣ ಸತ್ಯ ಮತ್ತು ಅದರ ಹೊರತಾಗಿ ಬೇರೇನೂ ಇರಲಿಲ್ಲ ಎನ್ನುವುದು ಅಪ್ಪಟ ಸುಳ್ಳು. ಈ ಕುರಿತಂತೆ ನಿಮ್ಮಿಂದಲೇ ನನಗೆ ಮೈಸೂರು ಮತ್ತು ಶ್ರೀರಂಗಪಟ್ಟಣದ ಚಿತ್ರಣ ಮತ್ತು ಅರಸೊತ್ತಿಗೆಯ ನಿಜ ಸ್ವರೂಪ ಅರಿವಾದದ್ದು.

ಇತಿಹಾಸ ತಜ್ಞ ಬಾಲಣ್ಣನಿಗೆ ಅನನ್ಯ ನಮನಗಳು.

ದಿಕ್ಕು ಬದಲಿಸಿದ ಆಂಜನೇಯನ ವಿಗ್ರಹ ಕೆಲವು ಬಾರಿ ಕುತಂತ್ರಿಗಳ ಬಾಯಿಗೆ ಸಿಕ್ಕು ಪವಾಡವೆಂದು ಸಾರಲ್ಪಡುತ್ತದೆ. ಆದರೆ ನೀವಿಲ್ಲಿ ಅದರ ವಾಸ್ತವಾಂಶ ತೆರೆದಿಟ್ಟಿದ್ದೀರಿ.

ದೇವಸ್ಥಾನಗಳ ನಿರ್ಮಾಣಕ್ಕೆ ಉದ್ಧೇಶವಿರುತ್ತದೆ ಎನ್ನುವುದೂ ಜ್ಯೋತಿರ್ ಮಹೇಶ್ವರ ದೇವಸ್ಥಾನದ ಕಟ್ಟಿದ್ದರ ಬಗ್ಗೆ ನೀವು ನೀಡಿದ ಮಾಹಿತಿಯಿಂದ ತಿಳಿಯಿತು.

ಶತಮಾನಕ್ಕೂ ಮೀರಿದ ದೇಗುಲಗಳನ್ನು ಸರ್ಕಾರವೂ ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದೇನೋ? ಅಲ್ಲವೇ...

ಪಾರ್ವತಿ ದೇವಿಯನ್ನು ಕ್ಷಣ ಅಂಬಿಕಾ ಎಂದು ಬಿಂಬಿಸಿದ ಚಾಣಾಕ್ಷನು ಯಾರೋ?

ಇಂತಹ ಪುರಾತನ ದೇಗುಲಗಳ ಉತ್ತಮ ನಿರ್ವಹಣೆ ಮತ್ತು ಇತಿಹಾಸ ಅನ್ವೇಷಣೆ ಇನ್ನೂ ಆಗಬೇಕಾಗಿದೆ.

ಉತ್ತಮ ಸಚಿತ್ರ ಬರಹ.

ಜಲನಯನ ಹೇಳಿದರು...

ಬಾಲು ... ನಮ್ದೂಕೆ ಪ್ಯಾರ್ ಗೆ ಆಗ್ಬುಟ್ಟೈತೆ...
ಯಾವುದೋ ಹುಡುಗಿನ ಅಥವಾ ಕವನ ಕಂಡು ಅಲ್ಲ... ನಿಮ್ಮ ಇತಿಹಾಸ ಮತ್ತು ಮಾಹಿತಿ ಕೆದಕಿ ನಮ್ಮೆದುರು ಇಡುವ ಆಸಕ್ತಿಗೆ...
ಬಹಳ ಚನ್ನಾಗಿ ಚಿತ್ರ ಸಮೇತ ವಿಷಯ ತಿಳಿಸಿ ಅರಿವು ಮೂಡಿಸುತ್ತೀರ.

bilimugilu ಹೇಳಿದರು...

Wow Balu Sir.... eshtondu information.... neevu heLiddu nija.... Srirangapattanavannu nodoke ondu vaaravu saha saaladu.... maahitige dhanyavaadagalu.... nimma itiha(asakti)ge hatsoff...

Manjunatha Kollegala ಹೇಳಿದರು...

ಶ್ರೀರಂಗಪಟ್ಟಣ-ಮೈಸೂರು ಇತಿಹಾಸದ ಬಗ್ಗೆ ನನಗೆ ಅದೊಂದು ರೀತಿ ವ್ಯಾಮೋಹ, ಮಮಕಾರ. I get nostalgic about this. ಆಗೀಗ ಶ್ರೀರಂಗಪಟ್ಟಣಕ್ಕೆ ಹೋಗಿ ಅಲ್ಲಿನ ಪಾಳುಗಳಲ್ಲಿ ಅಲೆಯುವುದು ನನಗಿಷ್ಟವಾದ ಕೆಲಸಗಳಲ್ಲೊಂದು.

ಇದೊಂದು ಅಧ್ಯಯನಪೂರ್ಣಲೇಖನ. ಮುಂದಿನಬಾರಿ ಶ್ರೀರಂಗಪಟ್ಟಣಕ್ಕೆ ಹೋದಾದ ಇದರ ಪ್ರಿಂಟೌಟ್ ಒಯ್ಯುತ್ತೇನೆ. ಮಾಹಿತಿಗಾಗಿ ಧನ್ಯವಾದ.

Unknown ಹೇಳಿದರು...

Frank Zappa (was an American composer, musician, and film director) once said -“So many books, so little time.”
and he is very right. we have so many things to read and know. so little time !!!!.
people like you explore and give all of us beautiful information.

thanks and doing good job sir....

jayaram ಹೇಳಿದರು...

ತುಂಬಾ ಚೆನ್ನಾಗಿ, ವೈಜ್ಞಾನಿಕವಾಗಿ ಬರೆದಿದ್ದೀರಿ. ನಾನೂ ಅನೇಕ ಸ್ಥಳಗಳ ಚಿತ್ರ ತೆಗೆದಿದ್ದೇನೆ. ಆದರೆ ನಿಮ್ಮಂಥ ಸುಂದರ ಬರಹ ಬರೆದಿಲ್ಲ.