ಶುಕ್ರವಾರ, ಡಿಸೆಂಬರ್ 31, 2010

ಕನ್ನಡ ನಾಡಿನ ಈ ಸಣ್ಣ ದ್ವೀಪ ಹಿಡಿಯಲು ಅಂದು ಮಹಾ!! ಮಹಾ!! ಸೈನ್ಯ ಬಂದಿತ್ತು !! ಇಲ್ಲಿದೆ ಪುರಾವೆ !!!



1779 ರ ಮೇ 04   ರಂದು ಬ್ರಿಟೀಷರು   ಶ್ರೀ ರಂಗ ಪಟ್ಟಣ ಕ್ಕೆ ಮುತ್ತಿಗೆ ಹಾಕಿ  ಕೋಟೆಗೆ ಲಗ್ಗೆ ಇಟ್ಟ ದಿನ . ಯಾರಿಗೂ ಜಗ್ಗದ ಶ್ರೀ ರಂಗ ಪಟ್ಟಣದ  ಅಭೇದ್ಯ ಕೋಟೆ ಅಂದು ಮಧ್ಯಾಹ್ನ 1 -00  ಘಂಟೆ ವೇಳೆಗೆ ಬ್ರಿಟೀಷರ ತೂಫಾನಿಗೆ ಬಲಿಯಾಗಿತ್ತು.ನಂತರ ನಡೆದದ್ದು ಬ್ರಿಟೀಷರ ಗೆಲುವು " ಟಿಪ್ಪೂ ಸುಲ್ತಾನ್" ಶರಣಾಗದೆ ಯುದ್ದದಲ್ಲಿ  ಮರಣಹೊಂದಿದ್ದು ಇತಿಹಾಸ ಎಲ್ಲರಿಗೂ ತಿಳಿದಿದೆ. 



ಶ್ರೀ ರಂಗಪಟ್ಟಣ ವನ್ನು ಪ್ರವೇಶಿಸಲು ಬ್ರಿಟೀಷರು ಮೊದಲು ಕೋಟೆ ಓಡೆದ ಸ್ಥಳ .


ಅಂದಿನ ಯುದ್ದದ ಗೆಲುವಿನ  ಸ್ಮರಣಾರ್ಥ ಮೈಸೂರು ಸರ್ಕಾರವು ಯುದ್ದ ಸ್ಮಾರಕ ನಿರ್ಮಿಸಿದೆ .ಶ್ರೀ ರಂಗ ಪಟ್ಟಣದ ದ್ವೀಪದ ಪಶ್ಚಿಮ ಕೋಟೆ  ತುದಿಯಲ್ಲಿರುವ ಈ ಜಾಗ ದಲ್ಲಿ ಕಾವೇರಿ  ನದಿಯು ಎರಡು ಸೀಳಾಗಿ ಒಡೆದು ಶ್ರೀ ರಂಗ ಪಟ್ಟಣವನ್ನು ತಬ್ಬಿಕೊಂಡು ಹರಿದು  ಸಂಗಮದಲ್ಲಿ ಎರಡೂ ಸೀಳು ಗಳನ್ನೂ  ಮತ್ತೆ ಸೇರಿಸಿಕೊಂಡು ಸಾಗುತ್ತಾಳೆ.ಈ ಯುದ್ದ ಸ್ಮಾರಕದಲ್ಲಿ ಕೆಳಗಡೆ  ವೃತ್ತಾಕಾರದಲ್ಲಿ ಕಲ್ಲಿನ ಅಡಿಪಾಯ ಹಾಕಿ ಅದರಮೇಲೆ ವಿಶಿಷ್ಟ ಆಕಾರದಲ್ಲಿ  ಕಲ್ಲಿನ ಕೆತ್ತನೆ ಮಾಡಿ ಗ್ರಾನೈಟ್ ಕಲ್ಲಿನ ಫಲಕಗಳನ್ನು ನಾಲ್ಕೂ ಕಡೆ ಪ್ರದರ್ಶಿಸಲಾಗಿದೆ.ಫಲಕದ ಕಲ್ಲಿನ ಮೇಲೆ  ನಾಲ್ಕೂ ಕಡೆ ಕಲ್ಲಿನ ಗುಂಡುಗಳನ್ನು ಅಲಂಕಾರಕ್ಕೆ ಇಟ್ಟು[ ಈ ಕಲ್ಲಿನ ಗುಂಡುಗಳನ್ನು ಅಂದಿನ ಯುದ್ದಗಳಲ್ಲಿ ಬಳಸುತ್ತಿದ್ದ ನೆನಪಿಗೆ ]ಅದರಮೇಲೆ ನುಣುಪು ಕಲ್ಲಿನ  ಗೋಪುರ ವಿದ್ದು ನೋಡಲು ಸುಂದರವಾಗಿದೆ. ಒಂದು ಶತಮಾನ   ಪೂರೈಸಿರುವ ಈ ಸ್ಮಾರಕ ಬಹಳಷ್ಟು ಹವಾಮಾನ ವೈಪರೀತ್ಯ ಅನುಭವಿಸಿ ಇಂದಿಗೂ ಇತಿಹಾಸ ಸಾರುತ್ತಾ ನಿಂತಿದೆ.ಬನ್ನಿ ಪರಿಚಯ ಮಾಡಿಕೊಳ್ಳೋಣ.   ಮೊದಲ ಪಾರ್ಶ್ವದಲ್ಲಿ ಈ ಸ್ಮಾರಕ ನಿರ್ಮಿಸಿದ ಉದ್ದೇಶ ತಿಳಿಸಲಾಗಿದ್ದು ಅದನ್ನು  1907  ರಲ್ಲಿ ಅಂದಿನ ಮೈಸೂರು ಸರ್ಕಾರ ನಿರ್ಮಿಸಿದೆ.                                   

                                                                                                                                                                                                                 
ಬನ್ನಿ ಸ್ಮಾರಕದ ಮೊದಲ ಪಾರ್ಶ್ವವನ್ನು ನೋಡೋಣ  ಅಲ್ಲಿ ಈ ಸ್ಮಾರಕ ನಿರ್ಮಿಸಿದ ಬಗ್ಗೆ ಮಾಹಿತಿ ಇದೆ. ಇದನ್ನು ನಿರ್ಮಿಸಿದ ಕಾರಣವನ್ನು ವಿವರಿಸಲಾಗಿದೆ.
 ಎರಡನೇ ಹಾಗು ಮೂರನೇ  ಪಾರ್ಶ್ವದಲ್ಲಿ ಶ್ರೀರಂಗ ಪಟ್ಟಣದ ಅಂತಿಮ ಕದನದಲ್ಲಿ  ಭಾಗವಹಿಸಿದ ಹಲವಾರು ದೇಶೀ /ವಿದೇಶಿಸೈನಿಕ ತುಕಡಿಗಳ  ಹೆಸರನ್ನುನಮೂದಿಸಲಾಗಿದೆ.ಇದರಲ್ಲಿ ಹೆಸರಿಸಲಾಗಿರುವ  ಹಲವಾರು ತುಕಡಿಗಳು ಇಂದಿಗೂ ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ !!! ಬನ್ನಿ ಮತ್ತೊಂದು ಪಾರ್ಶ್ವ ನೋಟಕ್ಕೆ   ಇಲ್ಲಿ ಕದನದಲ್ಲಿ ಮಡಿದ ಹಾಗು ಗಾಯಗೊಂಡ ಯೂರೋಪಿಯನ್  ಅಧಿಕಾರಿಗಳ ಹೆಸರನ್ನು ಕೆತ್ತಲಾಗಿದೆ. ಈ ಪ್ರದೇಶವು  ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮ ಭಾಗಕ್ಕಿದ್ದು ಒಳ್ಳೆಯ ಸೂರ್ಯಾಸ್ತ ವೀಕ್ಷಣೆಗೆ ಅನುಕೂಲಕರವಾಗಿದೆ.  ಮತ್ತೊಂದು ವಿಶೇಷ ಅಂದ್ರೆ  ದ್ವೀಪದ ಎರಡೂ ಭಾಗದಲ್ಲಿ ಹರಿವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ  ಬೆಂಗಳೂರು ಮೈಸೂರು ರೈಲುಗಳು ಸಂಚರಿಸುವ ನೋಟ ಚೆನ್ನಾಗಿರುತ್ತದೆ. ಮುಂದೊಮ್ಮೆ ಇಲ್ಲಿಗೆ ಬಂದು ಹೋಗಿ .ಈ ಸ್ಮಾರಕ ಸಂತಸ ಪಡುತ್ತದೆ.



ಬುಧವಾರ, ಡಿಸೆಂಬರ್ 8, 2010

ಶ್ರೀ ರಂಗಪಟ್ಟಣದ ನಿಗೂಢ ಸ್ಮಾರಕ !! ನಮ್ಮನ್ನು ಕ್ಷಮಿಸಿಬಿಡಿ ಮಹಾರಾಣಿ!!

ಶ್ರೀ ರಂಗಪಟ್ಟಣ ದ ಪಶ್ಚಿಮವಾಹಿನಿ ರೈಲ್ವೆ ಗೇಟ್ ಹತ್ತಿರ ಕಣ್ಣಿಗೆ ಬಿದ್ದ ಈ ಸ್ಮಾರಕ ಕಣ್ಸೆಳೆಯಿತು!ಹತ್ತಿರ ಹೋದಾಗ ಇದು ಕಳಚಿದ ಇತಿಹಾಸದ ಒಂದು ಹರಿದ ಪುಟವಾಗಿ ಕಂಡಿತು.
                                                                                                                               ಇದೇನಿದು ಒಗಟು ಅಂತಿರ !ಬನ್ನಿ ಹತ್ತಿರ ಹೋಗೋಣ!ನೋಡಿ ಇಲ್ಲಿಯ ಸ್ಥಿತಿ! ಇದು ಮೈಸೂರು ಒಡೆಯರ ವಂಶದ ೧೭೭೬-೧೭೯೬ ಅವದಿಯ ಖಾಸಾ ಚಾಮರಾಜ ಒಡೆಯರ್ VIII ಅವರ ಪತ್ನಿ ಮಹಾರಾಣಿ ಕೆಂಪ ನಂಜಮ್ಮಣಿ ಅವರ ಸಮಾಧಿ ಯಾಗಿದೆ.
ಹತ್ತಿರದಲ್ಲೆ ಪೀಠ ದಲ್ಲಿ ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಶಾಸನ ಬರೆದಿದ್ದು ವಿರೂಪಗೊಂಡಿವೆ!ಈಗ ಸ್ಮಾರಕ ಇರುವ ಪರಿಸ್ಥಿತಿಯನ್ನು ಚಿತ್ರಗಳಲ್ಲಿ ಮುಂದಿಟ್ಟಿದ್ದೇನೆ.ಪ್ರಪಂಚದ ಇತಿಹಾಸ ತಿಳಿಯಲು ಹಾತೊರೆಯುವ ನಾವು ನಮ್ಮ ಇತಿಹಾಸದ ಪುಟಗಳನ್ನು ಹರಿದು ಹಾಕುತ್ತಿರುವುದು ಯಾವ ನ್ಯಾಯ?ದಯಮಾಡಿ ನಮ್ಮನ್ನು ಕ್ಷಮಿಸಿಬಿಡಿ ಮಹಾರಾಣಿ ಯವರೇ ಎಂದು ಹೇಳಿ, ಹಾಗೆ ಇತಿಹಾಸ ಹೊಸಕಿಹಾಕಿ ನಮ್ಮ ಪಾಡಿಗೆ ನಾವು ಸುಮ್ಮನಿರೋಣ ಬನ್ನಿ !ಏನಂತಿರ ನೀವು?

ಶನಿವಾರ, ಡಿಸೆಂಬರ್ 4, 2010

ಹಸಿರಿನಲ್ಲಿ ಕಳೆದು ಹೋದಶ್ರೀರಂಗ ಪಟ್ಟಣದ ಐತಿಹಾಸಿಕ ಸಕ್ಕರೆ ಕಾರ್ಖಾನೆ!!ವಿಶ್ವ ಮಾನ್ಯತೆಪಡೆದು ಮೆರೆದಿತ್ತು !!!!

                                                                                                                    ಗೆಳೆಯ ಸತ್ಯ ರವರೊಂದಿಗೆ ಶ್ರೀರಂಗ ಪಟ್ಟಣಕ್ಕೆ ಮೈಸೂರಿನಿಂದ ಹೊರಟವನಿಗೆ ರಂಗನ ತಿಟ್ಟಿನ ಸಮೀಪ ಸಿಕ್ಕಿದ ಈ ಪಾಳುಬಿದ್ದ ಗೋಡೆಗಳು ಕಣ್ಣಿಗೆ ಬಿದ್ದವು !ಸ್ಥಳಿಯರನ್ನು ವಿಚಾರಿಸಿದಾಗ ಇದು ಪಾಳು ಬಿದ್ದ ಸಕ್ಕರೆ ಕಾರ್ಖಾನೆಯೆಂದು ತಿಳಿಯಿತು!ನಂತರ ಬಿ.ಎಲ್.ರೈಸ್ ರವರ ಮೈಸೂರ್ ಗೆಜೆತೀರ್ ಹುಡುಕಿದಾಗ ಆಶ್ಚರ್ಯಕರ ವಿಚಾರ ತೆರೆದುಕೊಂಡಿತು!1847  ರಲ್ಲಿ ಸರ್ ಮಾರ್ಕ್ ಕಬ್ಬನ್ [ಬೆಂಗಳೂರಿನ ಕಬ್ಬನ್ ಪಾರ್ಕ್  ಇವರ ಹೆಸರಿನಲ್ಲಿದೆ ]ಮೈಸೂರಿನ ಅಂದಿನ ಕಮಿಷನರ್ ರವರು ಪಾಲಹಳ್ಳಿ ಅಷ್ಟಗ್ರಾಮ ಸಕ್ಕರೆ ಕಾರ್ಖಾನೆ [the ashtagram sugar works}ಸ್ಥಾಪಿಸಿದರೆಂದು ಈ ಭಾಗದ ರೈತರು ಬೆಳೆದ ಕಬ್ಬಿನಿಂದ ಸಕ್ಕರೆ ತಯಾರಿಕೆ ನಡೆದಿತೆಂದು ,ಇಲ್ಲಿನ ಯಂತ್ರ ಗಳನ್ನೂ ಗ್ರೋವ್ಸ್ ಅಂಡ್ ಕಂಪನಿ ಪೂರೈಸಿತೆಂದು,ತಿಳಿದು ಬಂತು!ಹಾಗೆ ಮುಂದುವರೆದು ಈ ಕಾರ್ಖಾನೆಯಲ್ಲಿ 10  ಜನ ಯುರೋಪಿನವರು ಹಾಗು 300 ಮಂದಿ ಸ್ಥಳಿಯರು ಕೆಲಸ ಮಾಡಿರುವುದು ಕಂಡುಬರುತ್ತದೆ!ಇಲ್ಲಿ ತಯಾರಾದ ಹರಳಿನ ಸಕ್ಕರೆ ಉತ್ತಮ ಗುಣಮಟ್ಟದಿಂದ ಪ್ರಸಿದ್ದಿ ಪಡೆದು ಆ ದಿನಗಳಲ್ಲೇ ಲಂಡನ್ನಿನ ಪ್ರದರ್ಶನದಲ್ಲಿ 1851,ಮತ್ತು 1861 ರಲ್ಲಿ ಪ್ರಶಸ್ತಿ ಪಡೆದು ನಂತರ ಪ್ಯಾರಿಸ್ಸ್ಸಿನ ಯುನಿವರ್ಸಲ್ ಪ್ರದರ್ಶನದಲ್ಲಿಯೂ ಸಹ 1867ರಲ್ಲಿ ಅತ್ಯುತ್ತಮ ಸಕ್ಕರೆಯೆಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡು ಮೆರೆದಿದೆ!ನಂತರ ಹಾಗೆ ಇತಿಹಾಸಕಾರರು ಕಾರಣ ಕಂಡುಹಿಡಿಯಲಾಗದ ಪ್ರಯುಕ್ತ ಕಾರ್ಖಾನೆ ಯಾಕೆ ಮುಚ್ಚಿತು ಎಂಬುದೂ ತಿಳಿದು ಬರುವುದಿಲ್ಲ ! ಅಂದು ವಿಶ್ವ ಮಾನ್ಯತೆ ಪಡೆದು ಮೆರೆದು ಇಂದು ಗತ ನೆನಪಿಗೆ ಸಾಕ್ಷಿಯಾಗಿ ಯಾರು ನಂಬದ ವಿಚಾರಗಳ ಕುರುಹುಗಳಾಗಿ   ಅನಾಥವಾಗಿ ಯಾರಿಗೂ ಬೇಡವಾಗಿ ದಿನ ದಿನವು ಕರಗುತ್ತಾ! ಮರುಗುತ್ತಾ! ನಿಂತಿವೆ .ಚಿತ್ರಗಳನ್ನು ನೋಡಿ ಇತಿಹಾಸಕ್ಕೆ ಹಾಗೂ ಈ ಕಾರ್ಖಾನೆಗೆ   ಒಂದು ಥ್ಯಾಂಕ್ಸ್ ಹೇಳೋಣ ಅಲ್ವ!